ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಬಹುಮುಖ ಪ್ರತಿಭೆ.ಕತೆಗಾರ, ಕಾದಂಬರಿಗಾರ ,ಅಂಕಣಕಾರ, ಅಧ್ಯಾಪಕ, ಸಂಘಟಕ, ಪ್ರಕಾಶಕ ಹೀಗೆ ಬಹುಮುಖ ವ್ಯಕ್ತಿತ್ವದ ಇವರು ಕನ್ನಡ ಸಾಹಿತ್ಯ, ಕನ್ನಡ ಸಮಾಜ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಒಂದು ಮುಖ್ಯ ಹೆಸರು. == ಜೀವನ == ಮಂಡ್ಯ ಜಿಲ್ಲೆಯ ನಾಗತಿಹಳ್ಳಿ ಎಂಬಲ್ಲಿ ಆಗಸ್ಟ್ ೧೫, ೧೯೫೮ರ ವರ್ಷದಲ್ಲಿ ಚಂದ್ರಶೇಖರ್ ಜನಿಸಿದರು. ತಂದೆ ತಿಮ್ಮಶೆಟ್ಟಿ ಗೌಡರು, ತಾಯಿ ಪಾರ್ವತಮ್ಮ. ಪ್ರಾರಂಭಿಕ ಶಿಕ್ಷಣವನ್ನು ತಮ್ಮ ಊರಾದ ನಾಗತಿಹಳ್ಳಿಯಲ್ಲಿ ಪಡೆದ ಅವರು ಮುಂದೆ ತಮ್ಮ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ನಡೆಸಿದರು. ಸ್ನಾತಕೋತ್ತರ ಪದವಿ ಕನ್ನಡ ಎಂ.ಎ ಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೮ ಚಿನ್ನದ ಪದಕಗಳು ಮತ್ತು ೨ ನಗದು ಬಹುಮಾನಗಳೊಂದಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ತಮ್ಮ ಗ್ರಾಮವಾದ ನಾಗತಿಹಳ್ಳಿಯಲ್ಲಿ ‘ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ`ಯನ್ನು ಆರಂಭಿಸಿದರು.ಜೊತೆಗೆ ಪ್ರತಿ ಯುಗಾದಿಯ ಸಂದರ್ಭದಲ್ಲಿ `ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬಕ್ಕೆ ಸಹಾ ಚಾಲನೆ ನೀಡಿದರು ಈ ಮೂಲಕ ಗ್ರಾಮೀಣ ಜನರ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಿಗೊಳಿಸುವ ಕೆಲಸವನ್ನು ಆರಂಭಿಸಿದರು. ಈ ವೇದಿಕೆಯ ಮೂಲಕ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ, ರಂಗಮಂದಿರ, ಕಂಪ್ಯೂಟರ್ ಕೇಂದ್ರಗಳನ್ನು, ಕೃಷಿ ಅಧ್ಯಯನ ಪ್ರವಾಸ, ಉಚಿತ ವೈದ್ಯಕೀಯ ಶಿಬಿರಗಳು, ಸಹಕಾರಿ ಸಂಘಗಳ ಸ್ಥಾಪನೆ ಮುಂತಾದ ಗ್ರಾಮಮುಖೀ ಚಿಂತನೆಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ,. ಈ ವೇದಿಕೆಯು ಗ್ರಾಮೀಣರ ಆರ್ಥಿಕ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವ ಸಂಗತಿ ನಾಗಮಂಗಲ ತಾಲ್ಲೂಕಿನ ಬಿದರಕೆರೆ, ಯರಗನಹಳ್ಳಿ, ಸಬ್ಬನಕುಪ್ಪೆ ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿದೆ. ಈ ವೇದಿಕೆಯ ಆಶಯಗಳನ್ನೇ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ. == ಪ್ರಾಧ್ಯಾಪಕ ಮತ್ತು ಬರಹಗಾರರಾಗಿ == ಕನ್ನಡ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸತೊಡಗಿದ ನಾಗತಿಹಳ್ಳಿ ಚಂದ್ರಶೇಖರರು ಕಥಾಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದರು. ಇನ್ನೂ ಎಂಟನೆಯ ತರಗತಿಯಲ್ಲಿ ಓದುತ್ತಿರುವಾಗಲೇ ಅವರು ‘ಆವರ್ತ’ ಎಂಬ ಕಥೆ ಬರೆದರು. ಇದುವರೆಗೆ ಕಥೆ, ಕಾದಂಬರಿ, ಪ್ರವಾಸ ಕಥನಗಳನ್ನು ಒಳಗೊಂಡ ಅವರ ಸುಮಾರು 40 ಪ್ರಕಟಣೆಗಳು ಬೆಳಕು ಕಂಡಿವೆ. ‘ಹದ್ದುಗಳು’, ‘ನನ್ನ ಪ್ರೀತಿಯ ಹುಡುಗನಿಗೆ’, ‘ಮಲೆನಾಡಿನ ಹುಡುಗಿ, ಬಯಲು ಸೀಮೆಯ ಹುಡುಗ’, ‘ಸನ್ನಿಧಿ’, ‘ಪ್ರೇಮ ಕಥಾ ಸಂಪುಟ’, ‘ಅಕಾಲ’, ‘ಛಿದ್ರ’ ನಾಗತಿಹಳ್ಳಿಯವರ ಪ್ರಸಿದ್ಧ ಕಥಾ ಸಂಕಲನ ಗಳು. ‘ಬಾ ನಲ್ಲೆ ಮಧುಚಂದ್ರಕೆ’, ‘ಚುಕ್ಕಿ ಚಂದ್ರಮರ ನಾಡಿನಲ್ಲಿ’, ‘ವಲಸೆ ಹಕ್ಕಿಯ ಹಾಡು’ ಅವರ ಕಾದಂಬರಿಗಳು. ‘ಆಯನ’, ‘ಅಮೆರಿಕ! ಅಮೇರಿಕಾ!!’, ‘ದಕ್ಷಿಣ ಧ್ರುವದಿಂ’, ‘ಹೊಳೆದಂಡೆ’ ಮುಂತಾದವು ಅವರ ಪ್ರವಾಸ ಕಥನಗಳು’. ‘ನನ್ನ ಪ್ರೀತಿಯ ಹುಡುಗಿಗೆ’ ಹಲವು ಸಂಪುಟಗಳಲ್ಲಿ ಮೂಡಿಬಂದಿರುವ ಅವರ ಆತ್ಮಕಥೆಯಾಗಿದೆ. ‘ಶತಮಾನದಂಚಿನಲ್ಲಿ’ ಅವರ ವಿವಿಧ ಲೇಖನಗಳ ಸಂಗ್ರಹ ಸಂಪುಟವಾಗಿದೆ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. === ಕೃತಿಗಳು === ಹದ್ದುಗಳು ನನ್ನ ಪ್ರೀತಿಯ ಹುಡುಗನಿಗೆ ಮಲೆನಾಡಿನ ಹುಡುಗಿ, ಬಯಲುಸೀಮೆಯ ಹುಡುಗ ಬಾ ನಲ್ಲೆ ಮಧುಚಂದ್ರಕೆ ಚುಕ್ಕಿ ಚಂದ್ರಮರ ನಾಡಿನಲ್ಲಿ ಸನ್ನಿಧಿ ಅಕಾಲ ಪ್ರೇಮ ಕಥಾ ಸಂಪುಟ ವಲಸೆ ಹಕ್ಕಿಯ ಹಾಡು ಅಮೇರಿಕಾ ! ಅಮೇರಿಕಾ !! ಶತಮಾನದಂಚಿನಲಿ ಛಿದ್ರ ಕಥಾಯಾತ್ರೆ ಅಯನ ನನ್ನ ಗ್ರಹಿಕೆಯ ಅಮೆರಿಕಾ ದಕ್ಷಿಣ ಧ್ರುವದಿಂ ನನ್ನ ಗ್ರಹಿಕೆಯ ಈಜಿಪ್ಟ್ ನನ್ನ ಗ್ರಹಿಕೆಯ ಸಿಕ್ಕಿಂ ನನ್ನ ಗ್ರಹಿಕೆಯ ನೇಪಾಳ ನ್ನ ಗ್ರಹಿಕೆಯಅ ಲಸ್ಕ ನನ್ನ ಪ್ರೀತಿಯ ಹುಡುಗಿಗೆ (ಸಂಪುಟ1,2,3,4,5,6) ತರಳಬಾಳು ಹುಣ್ಣಿಮೆ ಕಾಲಾತೀತ ಅಮೃತಾಕ್ಷರ ನಾನು ಹಡೆದವ್ವ ಹೊಳೆದಂಡೆ ಅಂಕಣಮಾಲೆ (ನೋಟ 1,2,3,4) ರೆಕ್ಕೆ ಬೇರು ಉಂಡೂ ಹೋದ ಕೊಂಡೂ ಹೋದ ಕೊಟ್ರೇಶಿ ಕನಸು ಅಮೃತಧಾರೆ ಈಗ ನಿಮ್ಮ ಮೆಚ್ಚಿನ ಚಿತ್ರಗೀತೆಗಳು ಆತ್ಮಗೀತ == ದೃಶ್ಯ ಮಾಧ್ಯಮದಲ್ಲಿ == ಹೀಗೆ ಕಥೆ ಹೇಳುವುದರಲ್ಲಿ ಪ್ರೀತಿಯುಳ್ಳ ನಾಗತಿಹಳ್ಳಿ ಚಂದ್ರಶೇಖರರಿಗೆ ಕಥೆ ಹೇಳುವ ದೃಶ್ಯ ಮಾಧ್ಯಮದ ಕಡೆ ಕೂಡಾ ಒಲವು ಹರಿದು ಬಂತು.ಚಂದ್ರಶೇಖರ್ ಸಿನಿಮಾ ಉದ್ಯಮದಲ್ಲಿ ಕಾರ್ಯ ಪ್ರಾರಂಭಿಸಿದ್ದು 'ಕಾಡಿನ ಬೆಂಕಿ' ಚಿತ್ರದ ಸಂಭಾಷಣೆ ಬರೆಯುವುದರ ಮೂಲಕ. ತದನಂತರ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಮಾತಾಡ್ ಮಾತಾಡು ಮಲ್ಲಿಗೆ ಚಿತ್ರ ೨೦೦೭ರಲ್ಲಿ ಕ್ಯಾನೆ ಚಿತ್ರೋತ್ಸವದಲ್ಲಿ ತೆರೆ ಕಂಡಿತ್ತು. ಇಂದು ಕನ್ನಡ ಚಿತ್ರರಂಗದಲ್ಲಿ ನಾಗತಿಹಳ್ಳಿ ಚಂದ್ರಶೇಖರರ ಚಿತ್ರಗಳು ವಿಶಿಷ್ಟ ಸ್ಥಾನ ಪಡೆದಿವೆ. ಅವರ ‘ಮಾತಾಡ್ ಮಾತಾಡು ಮಲ್ಲಿಗೆ’ ಸಾಗರಗಳನ್ನು ದಾಟಿ ಕೇನ್ಸ್ ಅಂತಹ ಪ್ರತಿಷ್ಟಿತ ಉತ್ಸವಗಳಲ್ಲಿ ಪ್ರದರ್ಶನ ಕಂಡಿತು. ತಮ್ಮ ಅಧ್ಯಾಪನದ ದಿನಗಳಲ್ಲಿ ಚಿತ್ರಕಥೆ, ಸಂಭಾಷಣೆ, ಗೀತ ರಚನೆಗಳಲ್ಲಿ ಭಾಗಿಯಾಗುತ್ತಿದ್ದ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಾಯಕಗಳು ‘ಕಾಡಿನ ಬೆಂಕಿ’, ಸಂಕ್ರಾಂತಿ’, ಪ್ರಥಮ ಉಷಾ ಕಿರಣ’, ‘ಉದ್ಭವ’, ‘ಊರ್ವಶಿ’ ಮುಂತಾದ ಪ್ರಸಿದ್ಧ ಚಿತ್ರಗಳಿಗೆ ಮೆರುಗು ನೀಡಿತ್ತು.1991 ರಲ್ಲಿ ಮೂಡಿಬಂದ ‘ಉಂಡು ಹೋದ ಕೊಂಡು ಹೋದ’ ಚಿತ್ರದಿಂದ ಮೊದಲ್ಗೊಂಡಂತೆ, ‘ಬಾ ನಲ್ಲೆ ಮಧು ಚಂದ್ರಕೆ’, ‘ಕೊಟ್ರೇಶಿ ಕನಸು’, ‘ಅಮೆರಿಕ! ಅಮೇರಿಕಾ!!’, ‘ಹೂಮಳೆ’, ‘ನನ್ನ ಪ್ರೀತಿಯ ಹುಡುಗಿ’, ‘ಪ್ಯಾರಿಸ್ ಪ್ರಣಯ’, ‘ಅಮೃತಧಾರೆ’, ‘ಮಾತಾಡ್ ಮಾತಾಡು ಮಲ್ಲಿಗೆ’, ‘ಒಲವೆ ಜೀವನ ಲೆಖ್ಖಾಚಾರ’, ‘ನೂರೂ ಜನ್ಮಕು’ 'ಬ್ರೇಕಿಂಗ್ ನ್ಯೂಸ್', 'ಇಷ್ಟಕಾಮ್ಯ', 'ಇಂಡಿಯಾ ಇಂಗ್ಲೆಂಡ್' ಮುಂತಾದ ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ಕಲಾತ್ಮಕ ಚಿತ್ರಗಳ ಚಿಂತನಾತ್ಮಕ ಗುಣ, ಸಾಮಾಜಿಕ ಚಿತ್ರಗಳ ಸ್ಪಂದನೆ, ಆಧುನಿಕ ಬದುಕಿನ ವೈವಿಧ್ಯಮಯ ವೈರುಧ್ಯ ಇವುಗಳ ಜೊತೆಗೆ ಹಿತಮಿತದ ಸಂಗೀತ, ದೃಶ್ಯ ವೈಭವ ಇವುಗಳನ್ನೆಲ್ಲ ನಾಗತಿಹಳ್ಳಿ ತಮ್ಮ ಸೃಜನಶೀಲ ಸ್ಪರ್ಶದಲ್ಲಿ ಬೆಳ್ಳಿತೆರೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿನ ಹಲವಾರು ಪ್ರಶಸ್ತಿ, ಗಲ್ಲಾಪೆಟ್ಟಿಗೆಯ ಯಶಸ್ಸುಗಳು ಮತ್ತು ಸೋಲುಗಳನ್ನು ನಾಗತಿಹಳ್ಳಿ ಸಮಭಾವತ್ವದಲ್ಲಿ ಸ್ವೀಕರಿಸಿ ಮುನ್ನಡೆಯುತ್ತಿದ್ದಾರೆ. ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧ ಸಂಗೀತ ನಿರ್ದೆಶಕರಾಗಿರುವ ಮನೋಮೂರ್ತಿ ಅವರನ್ನು ಅಮೇರಿಕದ ಸಾಫ್ಟ್ವೇರ್ ಕ್ಷೇತ್ರದಿಂದ ಕನ್ನಡ ಚಿತ್ರ ಸಂಗೀತಕ್ಕೆ ಕರೆತಂದ ಕೀರ್ತಿ ಕೂಡಾ ನಾಗತಿಹಳ್ಳಿ ಚಂದ್ರಶೇಖರ್ ಅವರದ್ದು,ಇದೇ ರೀತಿ ಸ್ಟೀಫನ್ ಪ್ರಯೋಗ್ ಅವರನ್ನು ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. === ನಿರ್ದೇಶಿಸಿರುವ ಸಿನಿಮಾಗಳು === === ಗೀತರಚನೆ === === ನಿರ್ದೇಶಿಸಿರುವ ಧಾರಾವಾಹಿಗಳು === == ಪ್ರಶಸ್ತಿ,ಗೌರವಗಳು == ಸಾಹಿತ್ಯ ಕ್ಷೇತ್ರ: ೨೦೦೩ - ಶಿವಮೊಗ್ಗದ ಕರ್ನಾಟಕ ಸಂಘದಿಂದ ಅಂಕಣ ಸಾಹಿತ್ಯಕ್ಕೆ ``ಹಾ.ಮಾ.ನಾ.’’ ಪ್ರಶಸ್ತಿ ೨೦೦೫ - ಧರ್ಮಸ್ಥಳದಲ್ಲಿ ೭೩ನೇ ಸರ್ವಧರ್ಮ ಸಮ್ಮೇಳನದ ಭಾಗವಾಗಿ `ಸಾಹಿತ್ಯ ಸಮ್ಮೇಳನ’ದ ಉದ್ಘಾಟಕ ೨೦೦೮ - ಆಳ್ವಾಸ್ ಮೂಡುಬಿದಿರೆಯಿಂದ `ನುಡಿಸಿರಿ’ ಪ್ರಶಸ್ತಿ ೨೦೧೦ - ಕರ್ನಾಟಕ ಸರ್ಕಾರದಿಂದ `ರಾಜ್ಯೋತ್ಸವ’ ಪ್ರಶಸ್ತಿ ೨೦೧೧ - ಪ್ರೊ. ಎಸ್.ವಿ. ಪರಮೇಶ್ವರ ಭಟ್ಟ’ ಸಾಹಿತ್ಯ ಪ್ರಶಸ್ತಿ ೨೦೧೧ - ಮುಂಬೈನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಂಸ್ಕೃತಿಕ ಸಮ್ಮೇಳನದ ಅಧ್ಯಕ್ಷರು ೨೦೧೨ - ಮಂಗಳೂರಿನ `ಎಂ.ಆರ್.ಪಿ.ಎಲ್. ರಾಜ್ಯೋತ್ಸವ’ ಪ್ರಶಸ್ತಿ ೨೦೧೪ - ಕೀನ್ಯಾದಲ್ಲಿ ನಡೆದ `ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ’ದ ಅಧ್ಯಕ್ಷರು ೨೦೧೫ - ಮಂಡ್ಯದ `ಜಿಲ್ಲಾ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರು ೨೦೧೫ - ಮೈಸೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ೨೦೧೭- ಮೂಡುಬಿದಿರೆಯ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನದ ಸರ್ವಾಧ್ಯಕ್ಷರು ಸಿನಿಮಾ ಕ್ಷೇತ್ರ: ಸಾವಿರದೊಂದು ಸಂಚಿಕೆಗಳ ಪ್ರಥಮ ಸುದೀರ್ಘ ಕಿರುತೆರೆಯ ಧಾರಾವಾಹಿ `ವಠಾರ’ ಸೇರಿದಂತೆ ವಿವಿಧ ವಾಹಿನಿಗಳಿಗೆ ಹತ್ತು ಮೆಗಾ ಧಾರಾವಾಹಿಗಳ ಪ್ರಧಾನ ನಿರ್ದೇಶನ. `ಪ್ರತಿಬಿಂಬ’ ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡದ ಪ್ರಥಮ ಧಾರಾವಾಹಿ ೨೦೦೭- ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿಯ ಅಧ್ಯಕ್ಷರು ೨೦೧೩- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ತೀರ್ಪುಗಾರ ಸಮಿತಿಯ ಸದಸ್ಯರು ೨೦೧೩, ೨೦೧೪, ೨೦೧೫- ರೇಡಿಯೋ ಮಿರ್ಚಿ ಸೌತ್ ಮ್ಯೂಸಿಕ್ ಪ್ರಶಸ್ತಿಯ ತೀರ್ಪುಗಾರ ಸಮಿತಿಯ ಸದಸ್ಯರು ೨೦೧೬- ಕರ್ನಾಟಕ ಸರ್ಕಾರದಿಂದ ಪ್ರತಿಷ್ಠಿತ `ಪುಟ್ಟಣ್ಣ ಕಣಗಾಲ್ ಜೀವಮಾನ ಸಾಧನೆ’ ಪ್ರಶಸ್ತಿ ೨೦೧೮- ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರು ೨೦೧೯- ಭಾರತೀಯ ಚಲನಚಿತ್ರಗಳ `ಆಸ್ಕರ್’ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರು. ಕಳೆದ ಒಂದು ದಶಕದಿಂದ ಬೆಂಗಳೂರಿನಲ್ಲಿ ತಮ್ಮ `ಟೆಂಟ್ ಸಿನಿಮಾ’ ಶಾಲೆಯ ಮುಖಾಂತರ ಹಲವಾರು ಹೊಸ ಕಲಾವಿದರು ಮತ್ತು ತಂತ್ರಜ್ಞರನ್ನು ರೂಪಿಸಿ ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ನೀಡುತ್ತಿದ್ದಾರೆ === ರಾಷ್ಟ್ರ ಪ್ರಶಸ್ತಿ: === ಕೊಟ್ರೇಶಿ ಕನಸು ಅಮೇರಿಕಾ ! ಅಮೇರಿಕಾ !! ಹೂಮಳೆ === ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು === ಅತ್ಯುತ್ತಮ ಚಿತ್ರ 1994-95: ಕೊಟ್ರೇಶಿ ಕನಸು (ಅತ್ಯುತ್ತಮ ಸಾಮಾಜಿಕ ಚಿತ್ರ) 1996-97: ಅಮೆರಿಕಾ ಅಮೆರಿಕಾ (ಪ್ರಥಮ ಅತ್ಯುತ್ತಮ ಚಿತ್ರ) 1998-99: ಹೂಮಳೆ (ದ್ವಿತೀಯ ಅತ್ಯುತ್ತಮ ಚಿತ್ರ) 2005-06: ಅಮೃತಧಾರೆ (ತೃತೀಯ ಅತ್ಯುತ್ತಮ ಚಿತ್ರ) 2007-08: ಮಾತಾಡ್ ಮಾತಾಡು ಮಲ್ಲಿಗೆ (ತೃತೀಯ ಅತ್ಯುತ್ತಮ ಚಿತ್ರ) ಅತ್ಯುತ್ತಮ ಕಥಾಲೇಖಕ 1988-89: ಸಂಕ್ರಾಂತಿ 1991-92: ಉಂಡೂ ಹೋದ ಕೊಂಡೂ ಹೋದ 1996-97 : ಅಮೆರಿಕಾ ಅಮೆರಿಕಾ ಅತ್ಯುತ್ತಮ ಗೀತರಚನೆ 2002-03: ಪ್ಯಾರಿಸ್ ಪ್ರಣಯ ೨೦೧೯ : ಫಿಲಂ ಫೇರ್ ಪ್ರಶಸ್ತಿ ನನ್ನ ಪ್ರೀತಿಯ ಹುಡುಗಿ ಪ್ಯಾರಿಸ್ ಪ್ರಣಯ == ಹೊರಗಿನ ಸಂಪರ್ಕಗಳು == 2022-03-05 ವೇಬ್ಯಾಕ್ ಮೆಷಿನ್ ನಲ್ಲಿ. 2011-07-08 ವೇಬ್ಯಾಕ್ ಮೆಷಿನ್ ನಲ್ಲಿ. 2011-01-14 ವೇಬ್ಯಾಕ್ ಮೆಷಿನ್ ನಲ್ಲಿ. 2011-01-14 ವೇಬ್ಯಾಕ್ ಮೆಷಿನ್ ನಲ್ಲಿ. == ಉಲ್ಲೇಖಗಳು ==